ಸುರತ್ಕಲ್: ಅಗರಿ ಯಕ್ಷ ವೈಭವಕ್ಕೆ ಚಾಲನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಒಕ್ಟೋಬರ್ 4 , 2013
|
ಯಕ್ಷಗಾನ ನಿತ್ಯಾನ್ವೇಷಣಶಾಲಿ ಕಲೆಯಾಗಿದ್ದು ಕಾಲ ಕಾಲಕ್ಕೆ ಸ್ಥಿತ್ಯಂತರಗಳನ್ನು ಪಡೆದು ಪೌರಾಣಿಕ ಲೋಕವನ್ನು ಅಧುನಿಕ ಕಾಲಕ್ಕೂ ಪ್ರವಹಿಸುವಂತೆ ಮಾಡಿದ ಶ್ರೇಷ್ಠ ಕಲಾಪ್ರಕಾರವಾಗಿದೆ ಎಂದು ಮಂಗಳೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಮತ್ತು ಕಾರ್ಯಕ್ರಮ ಮುಖ್ಯಸ್ಥ ಡಾ| ವಸಂತ ಕುಮಾರ್ ಪೆರ್ಲ ಹೇಳಿದರು.
|
ಅಗರಿ ಯಕ್ಷ ವೈಭವವನ್ನು ಡಾ| ವಸಂತ ಕುಮಾರ್ ಪೆರ್ಲ ಉದ್ಘಾಟಿಸಿದರು
|
ಅವರು ಬುಧವಾರ ಸುರತ್ಕಲ್ ಗೋವಿಂದದಾಸ ಕಲಾ ಮಂದಿರದಲ್ಲಿ ಮಂಗಳೂರು ಆಕಾಶವಾಣಿ, ಸುರತ್ಕಲ್ ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣಾ ವೇದಿಕೆ, ಯಕ್ಷಗಾನ ಮತ್ತು ಲಲಿತ ಕಲಾ ಅಧ್ಯಯನ ಕೇಂದ್ರ ಸುರತ್ಕಲ್, ಮತ್ತು ಗೋವಿಂದದಾಸ ಕಾಲೇಜಿನ ಸಹಭಾಗತ್ವದಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಲಿರುವ ಅಗರಿ ಶ್ರೀನಿವಾಸ ಭಾಗವತರ ಯಕ್ಷಗಾನ ಪ್ರಸಂಗಗಳ ಸರಣಿ ತಾಳಮದ್ದಳೆ ಪ್ರಸಾರ ಕಾರ್ಯಕ್ರಮದ ಅಂಗವಾಗಿ ನಡೆಸಿದ ಅಗರಿ ಯಕ್ಷ ವೈಭವವನ್ನು ಉದ್ಘಾಟಿಸಿ ಮಾತನಾಡಿದರು.
ಅಗರಿ ಯಕ್ಷ ಪ್ರಸಂಗಗಳ ಸರಣಿ
ಮಂಗಳೂರು ಆಕಾಶವಾಣಿ ಕಳೆದ 36 ವರ್ಷಗಳಿಂದ ನಮ್ಮ ನಾಡಿನ ಶ್ರೇಷ್ಠ ಕಲೆಯಾದ ಯಕ್ಷಗಾನಕ್ಕೆ ಅದ್ವಿತೀಯ ಮನ್ನಣೆ ನೀಡಿ ಶ್ರೋತೃ ವರ್ಗಕ್ಕೆ ಆಪ್ತವಾಗುವಂತೆ ಮಾಡಿದೆ. ರಾಮಾಯಣ ಮಹಾಭಾರತ ತಾಳಮದ್ದಳೆಯ ಸರಣಿಯ ಅನಂತರದಲ್ಲಿ ಇದೀಗ ಯಕ್ಷಲೋಕದ ಬ್ರಹ್ಮನೆಂದು ಪ್ರಖ್ಯಾತರಾದ ಅಗರಿ ಅವರ ಯಕ್ಷ ಪ್ರಸಂಗಗಳ 26 ವಾರಗಳ ಸರಣಿ ಕಾರ್ಯಕ್ರಮವನ್ನು ಅ. 25ರಿಂದ ಬಿತ್ತರಿಸಲಿದೆ ಎಂದು ಡಾ| ಪೆರ್ಲ ತಿಳಿಸಿದರು.
ಅಗರಿ ಸಿದ್ಧ ಪುರುಷ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಹಾಗೂ ಕರ್ನಾಟಕ ಯಕ್ಷಗಾನ ಆಕಾಡೆಮಿ ಮಾಜಿ ಅಧ್ಯಕ್ಷ ಕುಂಬಳೆ ಸುಂದರ ರಾವ್ ಮಾತನಾಡಿ, ಅಗರಿಯವರ ಗರಡಿಯಲ್ಲಿ ಸಾವಿರಾರು ಕಲಾವಿದರು ರೂಪುಗೊಂಡಿದ್ದು ಯಕ್ಷಗಾನ ಕಲಾಸೇವೆಯನ್ನು ದೇವತಾರಾಧನೆಯೆಂದು ಭಾವಿಸಿದ ಸಿದ್ಧ ಪುರುಷ ಅವರಾಗಿದ್ದರು ಎಂದರು.
ಉದಯವಾಣಿಯ ನಿವೃತ್ತ ಉಪಸಂಪಾದಕ ಡಾ| ಕೆ. ರಾಘವ ನಂಬಿಯಾರ್, ಕಲಾವಿದ ಡಾ| ಕೋಳ್ಯೂರು ರಾಮಚಂದ್ರ ರಾವ್, ಸಾಹಿತಿ ಪೊಳಲಿ ನಿತ್ಯಾನಂದ ಕಾರಂತ ಮುಖ್ಯ ಅತಿಥಿಗಳಾಗಿದ್ದರು.
ಅಗರಿ ಸಂಸ್ಮರಣಾ ವೇದಿಕೆಯ ಗೌರವಾಧ್ಯಕ್ಷ ಅಗರಿ ರಘರಾಮ ರಾವ್, ಕೋಶಾಧಿಕಾರಿ ಪ್ರೊ| ಗಿರಿಧರ ಹತ್ವಾರ್, ಉಪಾಧ್ಯಕ್ಷ ಅಗರಿ ಭಾಸ್ಕರ ರಾವ್, ಅಧ್ಯಕ್ಷ ಪಿ. ಪರಮೇಶ್ವರ ಐತಾಳ್, ಕಾಲೇಜಿನ ಪ್ರಾಚಾರ್ಯ ಪ್ರೊ| ರಾಜ್ಮೋಹನ್ ರಾವ್, ಸುಬ್ಬರಾವ್, ಪ್ರಸಿದ್ಧ ಪಿ., ದೇವಪ್ಪ ಕುಳಾಯಿ, ಗಣೇಶಪುರ ಗಿರೀಶ್ ನಾವಡ, ಅಗರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.
ಪಣಂಬೂರು ಶ್ರೀಧರ ಐತಾಳ್ ಸ್ವಾಗತಿಸಿ, ಅಗರಿ ರಾಘವೇಂದ್ರ ರಾವ್ ವಂದಿಸಿದರು. ಪ್ರೊ| ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.
* ಸುರತ್ಕಲ್ ಮೇಳವು ತುಳು ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಬೇಕೆಂದಾಗ ಮೊದಲಿಗೆ ನಿರಾಕರಿಸಿದ ಅಗರಿಯವರು ಕಟೀಲಿನ ಶ್ರೀ ದುಗಾಪರಮೇಶ್ವರಿ ದೇವಸ್ಥಾನದಲ್ಲಿ ಹೂ ಕಟ್ಟಿ ಹಾಕಿ ಅಲ್ಲಿಂದ ಅನುಮತಿ ಪಡೆದು ತುಳುನಾಡ ಸಿರಿಯನ್ನು ರಚಿಸಿದರು. ಈ ಪ್ರಸಂಗವು ನಾಡಿನೆಲ್ಲೆಡೆ ಅದ್ಬುತ ಯಶಸ್ಸು ಸಾಧಿಸಿತ್ತು ಎಂದು ಕುಂಬಳೆಯವರು ನೆನಪಿಸಿದರು.
* ಅಕಾಶವಾಣಿಯ ಯಕ್ಷಗಾನ ಕಾರ್ಯಕ್ರಮಕ್ಕೆ ಜನಸ್ಪಂದನ ಅದ್ಭುತವಾಗಿತ್ತು ಎಂದು ನೆನಪಿಸಿದ ಡಾ| ಪೆರ್ಲ ಅವರು ಅಸಂಖ್ಯ ಪತ್ರಗಳು ಈ ಕಾರ್ಯಕ್ರಮದ ಬಗ್ಗೆ ಬರುತ್ತಿತ್ತು ಎಂದರು.
* ಅಗರಿಯವರ ಶ್ರೀ ದೇವಿ ಮಹಾತ್ಮೆ ಪ್ರಸಂಗವು ವರ್ಷವೊಂದರ ತಿರುಗಾಟದಲ್ಲಿ ಮೂರು ಸಾವಿರದಷ್ಟು ಪ್ರದರ್ಶಿತಗೊಳ್ಳುತ್ತಿದ್ದು ಇದೊಂದು ಯಕ್ಷಲೋಕದ ಅದ್ಭುತ ವಿಶ್ವದಾಖಲೆಯ ಸಾಧನೆಯಾಗಿದೆ.
ಕೃಪೆ : http://www.udayavani.com
|
|
|